ಯುವಕ ಹೊಟ್ಟೆಗೆ ಟೀ ಅಂಗಡಿ ಮಾಲೀಕನೇ ಚಾಕುವಿನಿಂದ ಚುಚ್ಚಿ ಕೊಂದ! ಯಾಕೆ? | Janata news
ಚಿಕ್ಕಬಳ್ಳಾಪುರ: : ಅಂಗಡಿ ಮುಂದೆ ಎಂಜಲು ಉಗಿದ ಗ್ರಾಹಕನನ್ನು ಮಾಲೀಕನೇ ಚಾಕುವಿನಿಂದ ಮನಸೋಇಚ್ಛೆ ಇರಿದು ಕೊಂದ ಘಟನೆ ಚಿಂತಾಮಣಿ ತಾಲೂಕು ಉಲಪ್ಪನಹಳ್ಳಿಯಲ್ಲಿ ಸಂಭವಿಸಿದೆ.
ಉಲ್ಲಪನಹಳ್ಳಿಯ ಮುನಿಕೃಷ್ಣ (24) ಕೊಲೆಯಾದವ. ಅಂಗಡಿ ಮಾಲೀಕ 26 ವರ್ಷದ ಚೇತನ್ ಆರೋಪಿ.
ಪ್ರತಿದಿನ ಬೆಳಿಗ್ಗೆ ಚೇತನ್ ಅಂಗಡಿ ಬಳಿ ಬಂದು ಮುನಿಕೃಷ್ಣ ಟೀ ಕುಡಿಯುತ್ತಿದ್ದ. ಅದೇ ರೀತಿ ಇಂದು ಸಹ ಟೀ ಕುಡಿದು ಅದೇ ಅಂಗಡಿ ಮುಂಭಾಗ ಎಂಜಲು ಉಗಿದಿದ್ದಾನೆ. ಇದೇ ವಿಚಾರಕ್ಕೆ ಮುನಿಕೃಷ್ಣ ಹಾಗೂ ಚೇತನ್ ನಡುವೆ ಮಾತಿಗೆ ಬೆಳೆದು ದೊಡ್ಡ ಗಲಾಟೆಯಾಗಿದೆ.
ಸಿಟ್ಟಾದ ಚೇತನ್, ಚಾಕುವಿನಿಂದ ಗ್ರಾಹಕ ಮುನಿಕೃಷ್ಣನ ಹೊಟ್ಟೆ, ಎದೆ ಭಾಗಕ್ಕೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಮುನಿಕೃಷ್ಣನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಅಂಗಡಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.